Friday, May 6, 2011

ಅಮ್ಮಾ... ನಾ.. ನೀನಾಗಬೇಕು...

ಮೇ ಎರಡನೇ ಭಾನುವಾರ ಅಂತಾರಾಷ್ಟ್ರೀಯ ಅಮ್ಮಂದಿರ ದಿನ. ಪ್ರೀತಿಯ ಅಮ್ಮನಿಗೆ "ಅಮ್ಮನ ದಿನದ ಶುಭಾಶಯಗಳು...'' ಅಮ್ಮನ ದಿನದ ಪ್ರಯುಕ್ತ ಗೆಳತಿಯೊಬ್ಬಳ ನೊಂದ ಭಾವನೆಯನ್ನು ಇಲ್ಲಿ ಬರೆದಿದ್ದೇನೆ.

"ಹ್ಞೂಂ ನಮ್ಮಾ... ನನ್ನ ತಪ್ಪಿನ ಬಗ್ಗೆ ಅರಿವಾಗ ಬೇಕಾದರೆ ನಾನೂ ಅಮ್ಮನಾಗಬೇಕಾಯಿತು. ಒಂದಂತೂ ನಿಜ ಅಮ್ಮಾ... ನನ್ನ ಜೀವನದಲ್ಲಿ ಇನ್ನೂ ಏನಾದರೂಂದು ಆಸೆ ಇದೆಯೆಂದರೆ ಅದು ನನ್ನ ಮಗಳ ಜೀವನವನ್ನು ಸುಂದರೊಳಿಸುವುದೊಂದೇ..."


ಅಮ್ಮಾ...ನೀನು ಅದೆಷ್ಟು ಪ್ರೀತಿಸುತ್ತಿದ್ದೆ ನನ್ನ... ಅದೆಷ್ಟು
ಬೈಯ್ಯುತ್ತಿದ್ದೆ...ಆದ್ರೆ ಯಾಕಾಗಿ ಪ್ರೀತಿಸುತ್ತಿದ್ದೆ... ಯಾಕಾಗಿ ಬೈಯ್ಯುತ್ತಿದ್ದೆ ಎಂಬುದನ್ನೇ
ತಿಳಿಯಲಾಗಿಲ್ಲ ನನಗೆ...
ಪ್ರತಿ ಬಾರಿಯೂ ಮಾಡಿದ ಕೆಲಸದಲ್ಲಿ ತಪ್ಪು ಹುಡುಕುತ್ತಿದ್ದೆ. ಒಂದೊಂದು ವರ್ತನೆಗೂ ಒಂದೊಂದು ರೀತಿಯ ಕಾರಣ ಹೇಳಿ
ಬೈಯ್ಯುತ್ತಿದ್ದೆ. ಕಾಲೇಜಿನ ಆ ಸುಂದರ ಜೀವನದಲ್ಲಿ ಕಹಿ ನೆನಪು ಎಂದ್ರೇನೇ
ನಿನ್ನ ಬೈಗಳಿಂದ ಕೂಡಿದ ಮಾತುಗಳು...
ಹಾಗೇ ಮಾಡಬೇಕು, ಹೀಗೆ ಮಾಡಬೇಕು ಎನ್ನುವ ಕಡಿವಾಣದ ಮಾತು.
ನಿನ್ನ ಬಗ್ಗೆ ನನ್ನಲ್ಲಿ ಬೇಸರದ ಭಾವನೆಯನ್ನು ಮೂಡಿಸುತ್ತಿತ್ತು. ಯಾಕಾದರೂ ಅವಳು ನನ್ನ ಅಮ್ಮನಾದಳೋ... ಎಂಬ ಬೇಸರ. ಎಲ್ಲಿಗೇ ಹೋಗಲಿ
ಶಾಪಿಂಗ್‌ ಆಗಲೀ, ಸಿನಿಮಾಕ್ಕಾಗಲೀ ಆ ನಿನ್ನ ಕೆಂಪು ಕಣ್ಣು ಎದುರು ಬರುತ್ತಿತ್ತು.
ನಾನೇನು ಮಾಡಿದರೂ ಸರಿಯಾಗುತ್ತಿರಲಿಲ್ಲ...
ನಿನ್ನ ಮದುವೆಯಾಗುವವರೆಗೂ ನನ್ನ ಮಾತನ್ನು ಕೇಳಬೇಕು.
ನಂತರ ಏನು ಬೇಕಾದರೂ ಮಾಡು. ನಾನೇನೂ ಪ್ರಶ್ನಿಸುವುದಿಲ್ಲ ಎಂಬ
ಮಾತನ್ನು ನಾನು ದಿನಾ ಕಾಲೇಜಿಗೆ ಹೋಗುವಾಗ ಚೂರು ಬೇಸರವಿಲ್ಲದೆ
ಸುಪ್ರಭಾತದಂತೆ ಹೇಳುತ್ತಿದ್ದೆ. ಪದೇ ಪದೇ ನಿನ್ನ ಈ ರೀತಿಯ ರಿಸ್ಟ್ರಿಕ್ಷನ್‌
ಮಾತುಗಳನ್ನು ಕೇಳುತ್ತಿದ್ದಾದಗ ನೀನು ಅದೆಂತ ಹುಡುಗನನ್ನು ನನಗೆಂಟಾಕುತ್ತೀಯೋ ಎಂದೂ ಅನಿಸುತ್ತಿತ್ತು. ಅದಕ್ಕಾಗಿ ನಿನ್ನಿಷ್ಟಕ್ಕೆ ವಿರುದ್ಧವಾಗಿ
ನಾನಿಷ್ಟ ಪಡುವ ಹುಡುಗನನ್ನೇ ಮದುವೆಯಾದೆ...
ನಾನಿಷ್ಟ ಪಟ್ಟ ವ್ಯಕ್ತಿಯನ್ನು ನನ್ನ ಜೀವನದ ಸಂಗಾತಿಯಾಗಿ ಪಡೆದೆ. ಇನ್ನೇನು ನನ್ನ ಜೀವನ ಸಂತೋಷದ ಕ್ಷಣಗಳೆಡೆಗೆ ನಡೆಯುತ್ತದೆಂದುಕೊಂಡು ಸಂತೋಷವಾಗಿದ್ದೆ. ಆಗಲೇ ಅರಿವಾಗಿದ್ದು. ನಾನು
ನಾನಾಗಿರಬಾರದಿತ್ತು. ನಿನ್ನಹಾಗೆ ಇರಬೇಕಿತ್ತು ಅಂತಾ...
ಸುಖಜೀವನ ಎಂದು ಕೊಂಡ ನನ್ನ ಭ್ರಮೆಗೆ ಇದೀಗ ಸರಿಯಾಗಿ
ಶಿಕ್ಷೆಯಾಗಿದೆ. ಅಪ್ಪನ ಆರೋಗ್ಯ, ಅಜ್ಜಿಯ ಆರೈಕೆ, ಬೆನ್ನು ಮುರಿಯುವಷ್ಟು ಇರುವ
ತೋಟದ ಕೆಲಸ ಜೊತೆಗೆ ಆರು ಜನ ಮಕ್ಕಳ ಆರೈಕೆ. ಅವರೆಲ್ಲಿ ದಾರಿ ತಪ್ಪಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೋ ಎಂಬ ನಿನ್ನ ಆ ಕಾಳಜಿಯ
ಮಾತನ್ನು ನಾನೆಷ್ಟು ತಪ್ಪು ತಿಳಿದಿದ್ದೆ...
ಆಗ ನಿನಗೆ ಯಾವುದೇ ಐಶಾರಾಮೀ ಜೀವನವಿರಲಿಲ್ಲ. ನಿನ್ನ ಕಷ್ಟಗಳಿಗೆ ನಾನು ಭಾಗಿಯಾಗುತ್ತೇನೆ ಎಂಬುವವರ
ಸಹಾಯದ ದನಿಯಿರಲಿಲ್ಲ. ಆದರೂ ಸಂಸಾರವನ್ನು ಅದೆಷ್ಟು ಜವಾಬ್ದಾರಿಯಿಂದ ನಿಭಾಯಿಸಿದ್ದೀ...
ಎಲ್ಲಾ ಮಕ್ಕಳಿಗೂ ಉತ್ತಮ
ವಿದ್ಯಾಭ್ಯಾಸ ಕೊಡ್ಸಿದ್ದೀಯಾ... ಆದರೆ ನಾನು...
ನನಗೆಲ್ಲಾ ಸೌಕರ್ಯಗಳಿದೆ, ಕೈತುಂಬಾ ಹಣವಿದೆ, ಮಡಿಲಲ್ಲಿ ಒಂದು
ಹೆಣ್ಣು ಮಗುವಿದೆ. ಆದರೆ ನಿನ್ನ ನೋವೇ ನನ್ನ ನೋವು ಎಂದು ಸಾಂತ್ವನ
ನೀಡುವವರ್ಯಾರೂ ನನ್ನ ಬಳಿಯಿಲ್ಲ. ನೀನು ಊಟಮಾಡಿದ್ದೀಯಾ ಎಂದು ಹೇಳುವವರು ನನಗಾರೂ ಈಗಿಲ್ಲ...
ನಿನ್ನ ಸಹಾಯ ನನಗೆ ಬೇಕಮ್ಮಾ ಎಂದು ಹೇಳುವಷ್ಟು ಧೈರ್ಯವೂ ನನ್ನಲ್ಲಿಲ್ಲ. ಯಾಕೆಂದ್ರೆ ನನ್ನಿಷ್ಟದಂತೆ
ಬದುಕಬೇಕು ಎಂಬ ಹುಂಬತನದಿಂದ ನೀನು ತೋರಿಸಿದ ಹುಡುಗನನ್ನು
ಮದುವೆಯಾಗಲಿಲ್ಲ. ಜೀವದ ಗೆಳೆಯನಾಗಿರುತ್ತೇನೆ ಎಂದು ನಂಬಿ ಕೈ
ಹಿಡಿದ ಹುಡುಗನು ಕೈಗೊಂದು ಮಗು ಕೊಟ್ಟು ಹೋದ. ಹೋದವನು
ಮತ್ತೆ ಬರಲಿಲ್ಲ. ಈಗ ನನ್ನದು ಎಂದು ಕೊಂಡಿದ್ದ ಮಗು ಮಾತ್ರ ನನ್ನ
ಮಡಿಲಲ್ಲಿದೆ. ಆದರೆ ಈ ಸಮಾಜದಲ್ಲಿ ಪುರುಷನಿಲ್ಲದ ಕುಟುಂಬದಲ್ಲಿ
ಬೆಳೆವ ನನ್ನ ಮಗಳಿಗೆ ನಾನೆಂಥ ಸಂಸ್ಕಾರ ನೀಡಬಲ್ಲೆನಮ್ಮಾ...
ನಾನು ನಿನ್ನೊಡನೆ ಇದ್ದಾಗ ಮಗಳು ಕೆಟ್ಟ ದಾರಿ ತುಳಿಯಬಾರದೆಂದು ಅದೆಷ್ಟು ಕಾಳಜಿ ವಹಿಸುತ್ತಿದ್ದೆ ಎಂಬುದು ಇದೀಗ ನನ್ನ
ಮಗಳನ್ನು ಬೆಳೆಸುವಾಗ, ನಾನವಳ ಬಗ್ಗೆ ಕಾಳಜಿ ವಹಿಸುವಾಗ ಅರಿವಾಗುತ್ತಿದೆಯಮ್ಮಾ...
ಅಮ್ಮಾ ಅಂದ್ರೆ ಏನು... ಆಕೆ ಯಾಕೆ ಅಷ್ಟು ಕಾಳಜಿ ವಹಿಸುತ್ತಾಳೆಂದು.
ಹೌದಮ್ಮಾ... ನನ್ನ ಕ್ಷಮಿಸಿ ಬಿಡಮ್ಮಾ... ನಿನ್ನ ಆ ಕಾಳಜಿಯ ಮಾತನ್ನು
ನಾನು ಸೂಕ್ಷ್ಮವಾಗಿ ಅರಿಯಬೇಕಿತ್ತು. ನಿನ್ನ ಆ ಕರುಳಿನ ನೋವನ್ನು
ನಾನಾಗ ಅರಿತಿರಲಿಲ್ಲ. ಇದೀಗ ನಾನು ಒಂದು ಮಗುವಿಗೆ ಅಮ್ಮ
ನಾಗಿದ್ದೇನೆ. ನಾನು ದೊಡ್ಡವಳಾದಾಗ ನಿನ್ನ ಮನಸ್ಸಿನಲ್ಲಾದ ಗೊಂದಲಗಳು
ನನ್ನ ಮಗಳು ಚಿಕ್ಕವಳಿರುವಾಗಲೇ ನನ್ನನ್ನು ಕಾಡುತ್ತಿದೆ...
ನಿನ್ನ ಬಳಿರುವಾಗಲಂತೂ ನನ್ನ ತಪ್ಪುಗಳಿಗೆ ನಿನ್ನಲ್ಲಿ ಕ್ಷಮೆ ಕೇಳಲಿಲ್ಲ. ಇದೀಗೇಳುತ್ತಿದ್ದೇನಮ್ಮಾ...
ಹ್ಞೂಂ ನಮ್ಮಾ... ನನ್ನ ತಪ್ಪಿನ ಬಗ್ಗೆ ಅರಿವಾಗಬೇಕಾದರೆ ನಾನೂ ಅಮ್ಮನಾಗಬೇಕಾಯಿತು.
ಒಂದಂತೂ ನಿಜ ಅಮ್ಮಾ... ನನ್ನ ಜೀವನದಲ್ಲಿನ್ನೂ ಏನಾದರೂ ಆಸೆ ಇದೆಯೆಂದರೆ ಅದು ನನ್ನ ಮಗಳ ಜೀವನವನ್ನು
ಸುಂದರಗೊಳಿಸುವುದೊಂದೇ... ಜೀವನದಲ್ಲಿ ನಾನೀಗ ಯಾರ ಸಹಾಯವೂ ಇಲ್ಲದೆ ಅಸಹಾಯಕಳಾಗಿದ್ದೇನೆ ಎನ್ನುವುದೇನೋ ನಿಜ. ಆದ್ರೆ ನೀನು ಕೊಟ್ಟ ಶಿಕ್ಷಣ,
ಸಂಸ್ಕಾರ ಮರೆಯಾಗಲಿಲ್ಲ. ನಿನ್ನ ಆದರ್ಶ, ಪ್ರೀತಿ, ವಾತ್ಸಲ್ಯದ ಗುಣಗಳೇ ನನ್ನ ಬದುಕಿಗೂ ಬೆಳಕನ್ನು ಚೆಲ್ಲುತ್ತದೆ ಎಂಬ ಭರವಸೆ ನನಗಿದೆ.
ನಿನ್ನಂಥ ಸುಶೀಲೆಯಾದ ಹೆಣ್ಣು ನನ್ನಮ್ಮ ಎಂಬುದನ್ನು ನನ್ನ ನಡೆ ನುಡಿಯಲ್ಲಿ ವ್ಯಕ್ತ ಪಡಿಸಲು ನನಗಿದೊಂದು ಸದಾವಕಾಶ ಎಂದುಕೊಳ್ಳುತ್ತೇನಮ್ಮಾ.


Monday, April 25, 2011

ಆನಂದಮಯವಾಗಿರಲಿ...

"ಉತ್ತಮವಾಗಿ ಬದುಕುವುದೂ ಒಂದು ಕಲೆ. ಇದನ್ನು ಅರಿತರೆ ಎಂದಿಗೂ ಸಂತೋಷವಾಗಿರಹುದು. ಪ್ರತಿಯ್ಬೊರು ಸಾಯಲೇ ಬೇಕು. ಸದ್ಯಕ್ಕಂತೂ ಜೀವಿಸುವ ಆನಂದ ಅನುಭವಿಸಿ ಬದುಕಿರುವ ತನಕ ಸಕಾರಾತ್ಮಕವಾಗಿ ಯೋಚಿಸಿ. ಜೀವನ ಸುಂದರವಾಗಿಟ್ಟುಕೊಳ್ಳಿ."

ಜೀವನದಲ್ಲಿ ಜಂಜಾಟಗಳು ಇದ್ದೇ ಇರುತ್ತದೆ. ಇದರಿಂದ ಹೆದರಿದ ಕೆಲವರು ತಮ್ಮನ್ನು ತಾವೇ ಹಳಿದುಕೊಂಡರೆ ಕೆಲವರು ಅದನ್ನು ಧೈರ್ಯದಿಂದ ಎದುರಿಸುತ್ತಾರೆ. ಬದುಕುವ ಈ ಪರಿಯ ಜೀವನದಲ್ಲಿ ಸಂತಸ ತರುತ್ತದೆ.
ಬದುಕ ಬೇಕೆಂದರೆ ಮನದುಂಬಿ ಬದುಕಿ. ಪ್ರತಿ ಕ್ಷದಣದಲ್ಲೂ ಪೂರ್ತಿಯಾಗಿ ಜೀವಿಸಿ ಯಾವ ಗಳಿಗೆಗೆ ಕೊನೆ ಇರುತ್ತದೋ ಯಾರಿಗೆ ಗೊತ್ತು? ಇರುವುದರಲ್ಲೇ ನೆಮ್ಮದಿಯಿಂದ ಜೀವಿಸಿ. ಇದು ಜೀವನವನ್ನು ಸರಿಯಾಗಿ ಅನುಭವಿಸುವ ಸರಿಯಾದ ರೀತಿ. ಪ್ರತಿ ಕ್ಷಣವೂ ಉತ್ಸಾಹ ಮತ್ತು ಸಂತೋಷದಿಂದ ಕೂಡಿರಬೇಕು. ನಾಳೆ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ. ಹಾಗಿದ್ದರೆ ಈ ದಿನವನ್ನೇಕೆ ಮನಃಪೂರ್ತಿಯಾಗಿ ಜೀವಿಸಬಾರದು? ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲಾಲ ಒಂದು ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತಾ ಇರುತ್ತದೆ. ಜೀವನದಲ್ಲಿರುವ ಸಮಸ್ಯೆಗಳನ್ನು ಕಂಡು ಧೈರ್ಯಗೆಡಹುದು. ಮನದಲ್ಲಿ ಧೈರ್ಯತುಂಬಿರಬೇಕು. ಕಾಲಸರಿದಂತೆ ದುಃಖದ ಕ್ಷಣಗಳನ್ನು ಮರೆತು ಮನಸ್ಸು ಸಂತೋಷದಿಂದಿರುವಂತೆ ನೋಡಬೇಕು.

1. ಸುಂದರ ಕ್ಷಣ ನಿಮ್ಮದಾಗಲಿ
ಜೀವನದಲ್ಲಿ ಜಂಜಾಟಗಳು ಇದ್ದದ್ದೇ. ಪ್ರಕೃತಿಯಲ್ಲಿ ಸಿಗುವ ತುಂತುರು ಮಳೆ ಹನಿ, ಸಮುದ್ರದ ತೀರದ ಕಪ್ಪೆ ಚಿಪ್ಪು, ಮಕ್ಕಳೊಂದಿಗೆ ಕೆಲ ಕ್ಷಣವನ್ನು ಕಳೆಯಿರಿ. ಈ ಜೀವನ ನಿಜವಾಗಿಯೂ ಸುಂದರವಾಗಿದೆ ಎಂ ಅನುಭವ ನಿಮ್ಮದಾಗುತ್ತದೆ.
2.ಸ್ನೀಹಿತರ ಒಡನಾಟ
ಮನುಷ್ಯ ಪ್ರಪಂಚಕ್ಕೆ ಒಂಟಿಯಾಗಿಯೇ ಇರುತ್ತಾನೆ. ಆದರೆ ಆತ ಜೀವಿಸಲು ಅನೇಕ ಸಂಬಂಧಿಕರು ಹಾಗೂ ಸ್ನೇಹಿತರು ಬೇಕಾಗುತ್ತದೆ. ನಿಮ್ಮ ಮನಸ್ಸಿನ ಮಾತು ಹಾಗೂ ನೋವನ್ನು ಹಂಚಿಕೊಳ್ಳುತ್ತಾರೆ. ನಿಮ್ಮ ಮನಸ್ಸಿಗೂ ಆನಂದ ನೀಡುತ್ತಾರೆ.
3. ನಗುತ್ತಿರಿ
ನಗಲು ನೆಪಗಳು ಸಾವಿರಾರು ದೊರಕುತ್ತದೆ. ನಿಮ್ಮ ಅಕ್ಕ ಪಕ್ಕದಲ್ಲಿ ಸಿಗುವ ಹಾಸ್ಯ ಸನ್ನಿವೇಶವನ್ನೂ ಆನಂದಿಸಿ. ಹಾಸ್ಯ, ತಮಾಷೆಯಲ್ಲಿ ಪಾಲ್ಗೋಗಳ್ಳಿ. ನಿಮ್ಮ ನಗು ಜನರನ್ನು ನಿಮ್ಮಹತ್ತಿರ ಆಕರ್ಷಿಸುತ್ತದೆ. ಆಗ ಜೀವನದ ಮಜಾನೆ ಬೇರೆಯಾಗುತ್ತದೆ.
4. ಪಾರ್ಟಿ ಕೊಡಿ ಹಾಗೂ ಹೋಗಿ
ಜೀವನವನ್ನು ಆನಂದಿಸಲು ಒಳ್ಳೆಯ ಮಾರ್ಗ ಚಿಕ್ಕ ಕಾರಣಕ್ಕೂ ಪಾರ್ಟಿಯನ್ನು ಮಾಡಿ ನಾಲ್ಕು ಸ್ನೇಹಿತರೊಂದಿಗೆ ಟ್ರೀಟ್‌ ಕೊಡುವುದು ಮತ್ತು ಪಡೆಯುವುದು. ಗೆಳೆಯರು, ಬಂಧುಗಳು, ಸಂಗಾತಿಗಳ ಜೊತೆ ಕಳೆದ ಕೆಲವು ನಿರಾತಂಕ ಕ್ಷಣಗಳ ನೆನಪು ಇಡೀ ಜೀವನದಲ್ಲಿ ಖುಷಿಯನ್ನು ನೀಡುತ್ತದೆ.
5. ವಿವಾದಗಳಿಂದ ದೂರವಿರಿ
ಕಾರಣವಿಲ್ಲದೆ ವಿವಾದಗಳನ್ನು ಹುಟ್ಟಾಕಬೇಡಿ. ಆದಷ್ಟು ಹೊಂದಿಕೊಂಡು ಹೋಗುವ ಗುಣವನ್ನು ರೂಢಿಸಿಕೊಳ್ಳಿ. ಶಾಂತಿಯಿಂದ ಖುಷಿಯಲ್ಲಿ ಕಾಲಕಳೆದಷ್ಟು ಒಳ್ಳೆಯದು. ಆದರೆ ಇದರರ್ಥ ಅನ್ಯಾಯ ಸಹಿಸಿಕೊಳ್ಳಬೇಕು ಎಂದಲ್ಲ. ವೈ ಮನಸ್ಸಿನಿಂದ ಬೇರೆಯವರಿಗೆ ಕೆಡುಕನ್ನು ಮಾಡಬೇಡಿ.
6. ಸುತ್ತಾಡಲು ಹೋಗಿ
ಸಿಕ್ಕ ಸಮಯದಲ್ಲಿ ಸ್ನೇಹಿತರೊಂದಿಗೆ ಹೊರಗಡೆ ತಿರುಗಲು ಹೋಗಿ. ನಿಮ್ಮ ವಿಹಾರಕ್ಕೆ ಹೋಗುವಾಗ ಕ್ಯಾಮೆರಾ, ತಿಂಡಿಗಳು ಜೊತೆಯಿರಲಿ. ಸ್ನೇಹಿತರೊಂದಿಗೆ ಒಂದಿಷ್ಟು ಆಟಗಳನ್ನಾಡಿ. ಆ ಸುಂದರ ಕ್ಷಣಗಳು ನಿಮ್ಮ ಸವಿನೆನಪಿಗೆ ಕಾರಣವಾಗುತ್ತದೆ.
7. ಮಾತು ಮಿತವಾಗಿರಲಿ
ನೀವು ಆಡುವ ಪ್ರತಿಯೊಂದು ಮಾತು ನಿಮ್ಮ ಗುಣ, ಭಾವನೆಗಳನ್ನು ತಿಳಿಸುತ್ತದೆ. ಇನ್ನೋಬ್ಬರೊಂದಿಗೆ ಮಾತನಾಡುವಾಗ ಆದಷ್ಟು ಸಮಾಧಾನ ಹಾಗೂ ಪ್ರೀತಿಯಿಂದ ಮಾತನಾಡಿ.

ಜನರು ದೈಹಿಕ ನ್ಯೂನ್ಯತೆ ಇದ್ದರೂ ಧೈರ್ಯದಿಂದ ಬದುಕುತ್ತಾರೆ. ಹಾಗಿದ್ದಮೇಲೆ ಏನೂ ನ್ಯೂನ್ಯತೆ ಇಲ್ಲದ ನಾವೇಕೆ ಜೀವನದಲ್ಲಿ ಏನೋ ಕಳೆದುಕೊಂಡಂತೆ ಚಿಂತಿಸಿ ಬದುಕ ಬೇಕು? ಉತ್ತಮವಾಗಿ ಬದುಕುವುದೂ ಒಂದು ಕಲೆ. ಇದನ್ನು ಅರಿತರೆ ಎಂದಿಗೂ ಸಂತೋಷವಾಗಿರಹುದು. ಪ್ರತಿಯ್ಬೊರು ಸಾಯಲೇ ಬೇಕು. ಸದ್ಯಕ್ಕಂತೂ ಜೀವಿಸುವ ಆನಂದ ಅನುಭವಿಸಿ ಬದುಕಿರುವ ತನಕ ಸಕಾರಾತ್ಮಕವಾಗಿ ಯೋಚಿಸಿ. ಜೀವನ ಸುಂದರವಾಗಿಟ್ಟುಕೊಳ್ಳಿ.

Monday, April 11, 2011

ಮರೆವಿಗೆಲ್ಲಿದೆ ಮದ್ದು...


'ನಾನು ಈಗ ಕೈಲಿ ಪುಸ್ತಕವನ್ನು ಹಿಡ್ಕೊಂಡು ಬಂದಿದ್ದೆ, ಫೋನ್‌ಕಾಲ್‌ ಬಂತೂ ಅಂತ ಅದನ್ನಾ ಇಲ್ಲೆ ಎಲ್ಲೋ ಇಟ್ಟು ಹೋದೆ, ಅದೆಲ್ಲಿಟ್ಟೇ ಅನ್ನೋದೆ ಈಗ ನೆನಪಾಗ್ತಾ ಇಲ್ಲ... ಛೇ.. ಎಲ್ಲಿಟ್ಟೆ ನಾನು...?'
ನಿಜ, ಇಂಥ ಅನೇಕ ಮಾತುಗಳನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಇದುವೇ ಮರೆವು. ಮರೆವು ಎನ್ನುವುದು ಕೇವಲ ಒಬ್ಬಿಬ್ಬರ ಸಮಸ್ಯೆಯಲ್ಲ. ಮನುಷ್ಯಕುಲಕ್ಕೆ ಅಂಟಿ ಕೊಂಡ ಕಾಯಿಲೆ. ಮರೆವು ಎಂಬುದು ಮಾನವನಿಗೆ ವರವೂ ಹೌದು, ಶಾಪವೂ ಹೌದು. ಇದೆಷ್ಟು ಪ್ರಭಾವಿ ಎಂದರೆ ಅದನ್ನು ಗೆದ್ದವರು ಬಹುಷಃ ಯಾರು ಇಲ್ಲವೇನೋ!
ಇದೇನು ಮಹಾನ್‌ ವಿಷಯವಲ್ಲ ಎಂದು ತಿಳಿಯಬೇಡಿ. ಮರೆವಿನಲ್ಲೂ ಅನೇಕ ವಿಧಗಳಿವೆ. ಕೆಲವು ವಯಸ್ಸಿಗನುಗುಣವಾಗಿ ಬಂದರೆ ಇನ್ನು ಕೆಲವು ದೇಹದಲ್ಲಿರುವ ರಕ್ತ ಪರಿಚಲನೆಗಳಿಂದಲೂ ಬರುತ್ತದೆ. ಇದೊಮ್ಮೆ ವ್ಯಕ್ತಿಯನ್ನು ಆಕ್ರಮಿಸಿತು ಎಂದರೆ ಆತ ಸತ್ತಂತೆ ಬಾಳುವ ಪರಿಸ್ಥಿತಿಯನ್ನೂ ತಂದು ಬಿಡುತ್ತದೆ. ವ್ಯಕ್ತಿ ಚಿಕ್ಕವನಿರುವಾಗ ಆತನಲ್ಲಿ ನೆನಪಿನ ಶಕ್ತಿ ಅಗಾಧವಾಗಿರುತ್ತದೆ. ಹಾಗಾಗಿಯೇ ಚಿಕ್ಕವಯಸ್ಸಿನಲ್ಲಿರುವಾಗ ಮಕ್ಕಳು ಹೆಚ್ಚು ಭಾಷೆಯನ್ನು ಕಲಿಯಲು, ಹೆಚ್ಚೆಚ್ಚು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಹಾಗೇ ವಯಸ್ಸಾದಂತೆ ನೆನಪಿನ ಗೂಡಿನಲ್ಲಿರುವ ಅಲ್ಪ ಸಲ್ಪ ನೆನಪುಗಳು ಹಾರಿ ಹೋಗಿರುತ್ತದೆ. ಆದ್ದರಿಂದಲೇ ಅದನ್ನು ಅರಳು ಮರಳು ಎಂದುಕರೆಯುತ್ತಾರೆ. ಮರೆವು ಎಷ್ಟು ಅವಶ್ಯಕ ಎನಿಸುತ್ತದೆಯೋ ಅಷ್ಟೇ ಅಪಾಯ ಕಾರಿಯೂ ಹೌದು. ಮೆದುಳಿನಲ್ಲಿ ವಿಷಯಗಳ ಸಂಗ್ರಹಣೆಯು ಕೆಲವು ಹಂತಗಳಲ್ಲಿ ಮಾರ್ಪಡುವುದರಿಂದ ಮರೆವಿನಲ್ಲಿ ಜ್ಞಾನೇಂದ್ರಿಯ ಮರೆವು, ದೀರ್ಘಾವಧಿಯ ಮರೆವು, ಅಲ್ಪಾವಧಿಯ ಮರೆವು ಉಂಟಾಗುತ್ತದೆ. ಮೆದುಳಿನಲ್ಲಿ ಬಿಲೆಸೆಲ್‌‌ಸ ಪ್ರಮಾಣಗಳವ್ಯತ್ಯಾಸ ಹಾಗೂ ಸೆಲ್ಸ್ ನ ಉತ್ಪತ್ತಿ ಕಡಿಮೆಯಾಗುವುದರಿಂದ ಮರೆವು ಉಂಟಾಗುತ್ತದೆ. ನಾವಿರುವ ಸನ್ನಿವೇಶದಲ್ಲಿ ವಿಷಯಗಳ ಕುರಿತು ಗಮನ ಹರಿಸದೆ ಬೇರೊಂದು ವಿಚಾರದಲ್ಲಿ ಮಗ್ನರಾಗಿದ್ದರೂ ವಿಸ್ಮರಣೆ ಉಂಟಾಗುತ್ತದೆ. ಇದುಮುಖ್ಯವಾಗಿ ವ್ಯಕ್ತಿಯ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಎನ್ನುತ್ತಾರೆ ಉತ್ತರ ಕನ್ನಡ ಜಿಲ್ಲೆಯ ಎ.ವಿ.ಬಾಳಿಗಾ ಕಾಲೇಜಿನ ಮನೋವಿಜ್ಞಾನದ ಉಪನ್ಯಾಸಕ ವೆಂಕಟಾಚಲ.
ಮೆದುಳಿನಲ್ಲಾಗುವ ಬದಲಾವಣೆ ಪ್ರತಿಯೊಬ್ಬರೂ ಹುಟ್ಟಿದ ಅವಧಿಯಿಂದ 20 ವರ್ಷ
ಕಳೆದಂತೆ ಮೆದುಳಿನಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತದೆ. ಇಂಥ ಸಮಯದಲ್ಲಿ ಕೆಲವು ಮೆದುಳಿನ ಕೋಶಗಳು ತಮ್ಮ ಶಕ್ತಿಯನ್ನು ಅಲ್ಪ ಪ್ರಮಾಣದಲ್ಲಿ ಕಳೆದುಕೊಳ್ಳುತ್ತ ಬರುವುದರಿಂದ ಮರೆವು ಉಂಟಾಗುತ್ತದೆ. ಕೆಲವೊಮ್ಮೆ ನಾವು ನೋಡುವ ಹಾಗೂ ಕೇಳುವ ವಿಷಯಗಳಲ್ಲಿ ಗಮನ ನೀಡದಿದ್ದರೂ ಸಹ ಮರೆವು ಉಂಟಾಗುತ್ತದೆ.

ವಿಸ್ಮರಣೆಗೆ ಕಾರಣ:
1. ಸಂಗತಿಗಳ ಬಗ್ಗೆ ಲಕ್ಷ್ಯ ವಹಿಸದಿರುವುದು.
2. ಅಮ್ನೇಷಿಯಾ ಉಂಟಾಗುವುದರಿಂದ.
3. ಕೆಲವೂಮ್ಮೆ ಆತ್ಮೀಯರನ್ನು ಕಳೆದು ಕೊಂಡು ಉಂಟಾಗುವ ಮಾನಸಿಕ ಆಘಾತ.
4. ವಯಸ್ಸಾದಂತೆ ಮೆದುಳಿನಲ್ಲಿ ವಿಷಯಗಳನ್ನು ಸಂಗ್ರಹಿಸಿಕೊಳ್ಳುವಾಗ ಬರುವ ಮಾನಸಿಕ ಘರ್ಷಣೆ.
5. ವ್ಯಕ್ತಿಯ ಮಾನಸಿಕ ಸ್ಥಿತಿಯ ಸಾಮರ್ಥ್ಯ.
6. ರಕ್ತದೊತ್ತಡ ಹೆಚ್ಚಾಗಿರುವುದು.
7. ಅತಿಯಾದ ಮಾತ್ರೆಗಳ ಸೇವಿಸುವುದು.
8. ಮೆದುಳಿನ ನರಗಳ ದೌರ್ಭಲ್ಯ.
9. ರಕ್ತ ಸಂಚಲನೆ ನಿಧಾನವಾಗುವುದು.
10. ಮೆದುಳಿಗೆ ಪರಿಣಾಮ ಕಾರಿ ಅಪಘಾತ
ಉಂಟಾಗುವುದರಿಂದ.

ವಿಸ್ಮರಣೆಗೆ ಚಿಕಿತ್ಸೆ:
1. ಗಿಡಮೂಲಿಕೆ ಔಷಧಗಳನ್ನು ಬಳಸುವುದು.
2. ಧ್ಯಾನ ಮಾಡುವುದು.
3. ಪೌಷ್ಠಿಕ ಆಹಾರಗಳನ್ನು ಸೇವಿಸುವುದರಿಂದ.
4. ಹಸಿರು ತರಕಾರಿ, ಒಂದೆಲಗ, ತುಳಸಿ ಎಲೆ, ಮೀನು
ಹಾಗೂ ಗರಿಕೆ ಹುಲ್ಲಿನ ರಸದ ಕಶಾಯ ಸೇವಿಸಬೇಕು.
5. ಧ್ಯಾನ, ಯೋಗ, ಹಾಗೂ ಪ್ರಾಣಯಾಮ
ಮಾಡುವುದರಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸಕೊಳ್ಳಬಹುದು.
6. ಮೆದುಳಿಗೆ ಕೆಲಸ ಕೊಡುವುದು, ಸುಡೋಕು,
ಪದಬಂಧ, ಚಿಕ್ಕಪುಟ್ಟ ಲೆಕ್ಕಗಳನ್ನೆಲ್ಲ ಮಾಡುವುದರಿಂದ ಮೆದುಳಿಗೆ ವ್ಯಾಯಾಮ ಕೊಟ್ಟಂತಾಗುತ್ತದೆ. ಮರೆವು ಉಂಟಾಗುತ್ತದೆ.

ಹೇಗೆ ನೆನಪಿಟ್ಟುಕೊಳ್ಳುವುದು?
1. ಬೇಕಾದ ವಿಷಯಗಳನ್ನು ಚೀಟಿಯಲ್ಲಿ ಬರೆದಿಟ್ಟು ಕೊಳ್ಳಿ.
2. ಕೇಳಿದ ಹೊಸ ವಿಚಾರಗಳನ್ನು ನಿಮ್ಮ ಹಳೆ ವಿಚಾರಗಳಿಗೆ ಅಥವಾ ಗೊತ್ತಿದ್ದ
ಪದಗಳಿಗೆ ಹೋಲಿಸಿ ಮನದಟ್ಟು ಮಾಡಿಕೊಳ್ಳಿ.
3. ನಿಮ್ಮ ಮುಖ್ಯ ಕೆಲಸಗಳ ಮಾಹಿತಿಗಳನ್ನು ನಿಮ್ಮ ದಿನಚರಿ ಪಟ್ಟಿಯಲ್ಲಿ
ಬರೆದಿಟ್ಟುಕೊಳ್ಳಿ.
4. ಹೊಸ ಹೊಸ ವಿಚಾರಗಳನ್ನು ಕೇಳಿದಂತೆ ಪುನಃ ಪುನಃ ಮನದಲ್ಲಿ
ನೆನಪಿಸಿಕೊಳ್ಳಿ.
5. ನಿಮ್ಮ ಕೆಲವು ದಾಖಲಾತಿ ಪುರವಣಿಗೆ ಅಥವಾ ಇನ್ಯಾವುದೋ ವಸ್ತುಗಳನ್ನು
ಇಡಲು ಅದರದೇ ಆದ ಜಾಗವನ್ನು ಮಾಡಿ ಪ್ರತಿ ಬಾರಿ ಅಲ್ಲೇ ಇಡಿ.
6. ಆಗಾಗ ಮನಸ್ಸನ್ನು ವಿಶ್ರಾಂತ ಗೊಳಿಸಲು ದಿನದಲ್ಲಿ ಒಂದು ಗಂಟೆ ಧ್ಯಾನ
ಮಾಡಿ.
7. ನಿಮ್ಮನ್ನು ನೀವು ದೈಹಿಕವಾಗಿ ಹಾಗೂ ಮಾನಸಿಕವಾಗಿ
ಕ್ರಿಯಾಶೀಲರನ್ನಾಗಿಸಿಕೊಳ್ಳಿ.
8. ಯಾವುದೇ ವಿಚಾರವನ್ನು ಕೇಳುವಾಗ ಗಮನವಿಟ್ಟು ಆಲಿಸಿ.
9. ಯಾವೊಂದು ವಿಚಾರದ ಬಗ್ಗೆಯೇ ಅತಿಯಾಗಿ ಯೋಚಿಸಬೇಡಿ.
10. ನಿಮ್ಮ ಮನಸ್ಸನ್ನು ಆದಷ್ಟು ತಿಳಿಯಾಗಿಡಲು ಪ್ರಯತ್ನಿಸಿ.

ದೈಹಿಕ ಆರೋಗ್ಯ ಹಾಳಾದರೆ ಯಾವುದಾದರೂ ಚಿಕಿತ್ಸೆ, ಔಷಧಿಗಳನ್ನು ಸೇವಿಸಿ
ಆರೋಗ್ಯವಂತರಾಗಬಹುದು. ಆದರೆ ಅದೇ ಮಾನಸಿಕ ಆರೋಗ್ಯ ಹಾಳಾದರೆ ಗುಣ
ಪಡಿಸುವುದು ಕಷ್ಟ ಸಾಧ್ಯ. ಅದರಲ್ಲೂ ಮದ್ದೇ ಇಲ್ಲದ ಮರೆವಿನಂತ ಕಾಯಿಲೆಗಳು
ಬಂದರೆ ಬಹಳ ಕಷ್ಟ.. ವ್ಯಕ್ತಿಯ ವ್ಯಕ್ತಿತ್ವ ಉತ್ತವಾಗಿದ್ದರೆ ಆತ ಕೆಲವೊಂದು
ಆಯಾಮಗಳಿಂದ ಮರೆವಿಗೆ ಕೊಂಚ ಪರಿಹಾರ ಕಂಡು ಕೊಳ್ಳಬಹುದು ಎನ್ನುತ್ತಾರೆ ವೆಂಕಟಾಚಲ
ಹೌದು... ಇಷ್ಟೊಂದು ವಿಷಯ ಓದಿದ ಮೇಲೆ ಮರೆವಿನ ಬಗ್ಗೆ ಮರ್ಯೋದಿಲ್ಲ ತಾನೇ..?

Friday, April 1, 2011

ನೆನಪಿನಾಳದಲಿ ಯುಗಾದಿ

'ಯುಗಾದಿ ಹೊಸತನದ ಸಂಕೇತ... ಸಕಲರಿಗೂ ತರಲಿ ಶುಭ... ಮೂಡಲಿ ಜೀವನದಲಿ ಹೊಸಬೆಳಕು... ಸಂವತ್ಸರಗಳಂತೆ ಬದಲಾಗಲಿ ಮನವು... ಬೆಳೆಯಲಿ ಹೃದಯ ಹೃದಯಗಳ ನಡುವಿನ ಪ್ರೀತಿಯ ಸಂಬಂಧ... ಸರ್ವರಿಗೂ ಖರ ಸಂವತ್ಸರದ ಶುಭಾಶಯಗಳು.’ ಅಂದು ಎಲ್ಲಿಲ್ಲದ ಆನಂದ. ಹೊಸ ಜೀವನದ ಹೊಸ್ತಿಲಲಿ ನಿಂತಿರುವ ನನಗೆ ಯುಗಾದಿಯ ಸ್ವಾಗತ ... ನಾನೇನೋ ಮನೆಗೆ ಬಂದ ಲಕ್ಷ್ಮಿ ಎಂಬಂತೆ ಮಾವನ ಉಪಚಾರ... ಬಾಗಿಲಿಗೆ ರಂಗೋಲಿಯಿಟ್ಟು ದೇವರ ಪೂಜೆಗೆ ಅಣಿಮಾಡಲು ಅತ್ತೆಯ ಸಹಕಾರ... ನಿಜಕ್ಕೂ ಬಾಳ ಹಾದಿಯ ಸುಖ-ದುಃಖದ ಪಯಣಕ್ಕೆ ಆ ಯುಗಾದಿ ದಾರಿ ದೀಪವಾಯಿತು... ಕನಸು ಮತ್ತು ವಾಸ್ತವಗಳ ಸಂಗಮವಾದ ಯುಗದ ಆದಿ ‘ಯುಗಾದಿ’ ನೂರಾರು ಕನಸುಗಳನ್ನು ಹೊತ್ತು ತಂದಿತ್ತು. ವಾಸ್ತವಗಳಿಗೆ ಮುಖಾ ಮುಖಿಯಾಗಿ ಸೆಣಸುವ, ಬದುಕಿನ ಅರ್ಥವನ್ನು ಹುಡುಕುವ, ಬದುಕಿನ ಮುಂದಿರುವ ದಟ್ಟ ಅರುಣೋದಯದ ಬೆಳಕಿನಲಿ ಕರಗಿ ಹೋಗುವಂತೆ ಕಷ್ಟಗಳು ಕರಗಿ ಹೋಗಿತ್ತು. ಹೊಸದಾಗಿ ಬಿಗಿದುಕೊಂಡ ಸಂಬಂಧಗಳಿಗೆ ಸುಂದರವಾದ ಅರ್ಥವನ್ನು ಯುಗಾದಿ ತಂದಿತ್ತು. ತುಂಟಾಟದ ನೆನಪುಗಳೊಂದಿಗೆ ಜವಾಬ್ದಾಯ ಜೀವನದತ್ತ ಅಡಿ ಇಡುವ ಶುಭ ಘಳಿಗೆ ಅದಾಗಿತ್ತು. ಪ್ರಕೃತಿಯಲ್ಲಿ ಗಿಡ-ಮರಗಳು ಹೊಸ ಚಿಗುರುಗಳಿಂದ ಆವೃತಗೊಂಡಂತೆ, ಕೈ ತುಂಬ ಬಳೆಗಳು, ಕಿವಿಯಲ್ಲಿ ಮಿನುಗುವ ಓಲೆ, ಹಣೆಯಲ್ಲಿ ನಗುತ್ತಿದ್ದ ಕುಂಕುಮ, ಕೆನ್ನೆಗೆ ಹಚ್ಚಿದ ಅರಿಶಿಣವು ನನ್ನ ಬಾಳಿನ ಬಾಗಿಲಿಗೆ ಹೊಸ ಭಾಗ್ಯ ತಂದಿತ್ತು. ಪ್ರಕೃತಿಯಲ್ಲಿ ಉಂಟಾಗುವ ಬದಲಾವಣೆಯಂತೆ ಪ್ರಕೃತಿಗೆ ಅನ್ವರ್ಥ ಎನ್ನಿಸುವ ಹೆಣ್ಣಿನ ಜೀವನದಲ್ಲೂ ಬದಲಾವಣೆಗಳು ವೌನವಾಗಿಯೇ ಬರುತ್ತದೆ. ಅದಕ್ಕೆ ಸಹನೆಯಿಂದ ಸಹಕರಿಸಿದಾಗಲೇ ಬದುಕಿನ ಸಿಹಿ-ಕಹಿಗಳನ್ನು ನೀಗಿಸಲು ಸಾಧ್ಯ ಎಂಬ ಅಮ್ಮನ ಮಡಿಲ ಮಾತು ಮನದಲ್ಲಿ ಮನೆಮಾಡಿತ್ತು. ಆಗ ಉದಯಿಸಿದ ಕಲ್ಪನೆಯ ಗಿಡಕ್ಕೆ ಆ ಯುಗಾದಿಯಲ್ಲಿ ನೀರೆರೆದಿದ್ದೆ. ಅದೀಗ ಬೆಳೆದು ತಂಪಾದ ಗಾಳಿ ಬೀಸುತ್ತಿದೆ ಎಂದು ಆನಂದಿಸುತ್ತಿರುವಾಗಲೇ ಮತ್ತೆ ಯುಗಾದಿ ಬಂದಿದೆ. ಎಲ್ಲೆಲ್ಲೂ ಸಡಗರದ ಇಂಪು ಮೊಳಗಿದೆ. ನಿಜ, ಯುಗಾದಿಯೇ ಹಾಗೆ. ಕೇವಲ ವರುಷದ ನೆನಪುಗಳನ್ನು ಮೆಲಕು ಹಾಕುವ ಜೊತೆಗೆ ಏನಾದರೂ ಬದುಕಲ್ಲಿ ಸಾಧಿಸಬೇಕೆನ್ನುವ ಸಂಕಲ್ಪ ತೋಡುವಂತೆ ಮಾಡುತ್ತದೆ. ಸುಖ-ದುಃಖಗಳ ಸಾಂಕೇತಿಕ ಕಲ್ಪನೆಯೇ ಯುಗಾದಿ. ಈ ಯುಗಾದಿ ಕೇವಲ ಒಂದು ದಿನದ ಜಾತ್ರೆಯಾಗಬಾರದು, ಬದಲಿಗೆ ದಿನಂಪ್ರತಿಯ ಜಾತ್ರೆಯಾಗಬೇಕು...

Monday, March 28, 2011

ಪ್ರಾಣ ಸಖಿಯಾಗಿ...

"ನಿರ್ಜೀವ ವಸ್ತುಗಳು ನಿಮ್ಮ ಆಸ್ತಿ ಎಂದು ಕೊಳ್ಳುವ ಬದಲು ನಿಮ್ಮ
ಪತಿಯೇ ಒಂದು ದೊಡ್ಡ ಆಸ್ತಿ ಎಂಬುದನ್ನು ಮರೆಯಬೇಡಿ.
ಸಂಸಾರ ಎಂದರೆ ನಿಮ್ಮ ಕನಸನ್ನು ಈಡೇರಿಸಿಕೊಳ್ಳುವ
ಸಂದರ್ಭವಲ್ಲ... ನಿಮ್ಮ ಜೀವನದ ಕರ್ತವ್ಯವನ್ನು ನೆರವೇರಿಸಲು
ಸಿಗುವ ಸುಸಂದರ್ಭ. ಅದನ್ನು ಸಹಕಾರ ಹಾಗೂ ಸಹನೆಯಿಂದ
ನಿರ್ವಹಿಸಿ ಪತಿಗೆ ಪ್ರಾಣ ಸಖಿಯಾಗಿ..."

ಹೆಣ್ಣು ಎಷ್ಟೇ ಮುಂದುವರಿದರೂ ಆಕೆ ಸಾಂಪ್ರದಾಯಿಕವಾಗಿ ಸಂಸಾರ ಎಂಬ ಬಂಧನಕ್ಕೆ ಒಳಗಾಗಲೇ ಬೇಕು. ಹಾಗಂತ ಅದು ಹೆಣ್ಣಿಗೆ ಸಿಗುವ ನಾಲ್ಕು ಗೋಡೆಯ ಮಧ್ಯದಲ್ಲಿರುವ ಬಂಧನವಲ್ಲ. ಅವಳಿಗೆ ಸಿಗುವ ಮರ್ಯಾದೆ ಮತ್ತು ಜವಾಬ್ದಾರಿಗಳು. ಒಂದು ಸಂಸಾರದಿಂದ ಇನ್ನೊಂದು ಸಂಸಾರಕ್ಕೆ ಕಾಲಿಟ್ಟು ಅಲ್ಲಿರುವ ಕಷ್ಟ ಸುಖಗಳಿಗೆ ಭಾಗಿಯಾಗಿ ಸುಂದರ ಸಂಸಾರವನ್ನು ಕಟ್ಟಬೇಕಾದ ಜವಾಬ್ದಾರಿ
ಹೆಣ್ಣಿನದು. ಸಹನೆ, ಸಹಕಾರ ಭಾವನೆಗಳು ಪುರುಷರಿಗಿಂತ ಸ್ತ್ರೀಯರಲ್ಲೇ ಹೆಚ್ಚಾಗಿರುವುದರಿಂದ ಆ ಒಂದು ಅಮೂಲ್ಯ ಸ್ಥಾನಮಾನವನ್ನು ಪ್ರಕೃತಿ ಹಾಗೂ ಸಂಸ್ಕೃತಿ ಹೆಣ್ಣಿಗೆ ಮೀಸಲು ನೀಡಿದೆ.
ಒಂದು ಹೆಣ್ಣು ಚಿಕ್ಕ ವಯಸ್ಸಿನಲ್ಲಿರುವಾಗ ತಂದೆಯ
ಆಶ್ರಯದಲ್ಲಿ , ಪ್ರಾಯಕ್ಕೆ ಬಂದಾಗ ಗಂಡನ ಆಶ್ರಯದಲ್ಲಿ ಹಾಗೂ ವೃದ್ಧಾಪ್ಯದಲ್ಲಿ ಮಗನ ಆಶ್ರಯದಲ್ಲಿರಬೇಕು ಎಂದು ಮಾಡಿರುವುದು ಆಕೆ ಸ್ವತಂತ್ರವಾಗಿರಬಾರದು ಎಂದಲ್ಲಾ... ಅವಳು ಅಷ್ಟು ಅಮೂಲ್ಯವಾದವಳು ಅವಳನ್ನು ಬಹಳ ಕಾಳಜಿಯಿಂದ ಕಾಪಾಡಿಕೊಳ್ಳಬೇಕೆಂಬ ಭಾವನೆಯಷ್ಟೇ...
ಅದರಲ್ಲೂ ಹೆಣ್ಣು ಮದುವೆಯಾಗಿ ಪುರುಷನ ಬಾಳಲ್ಲಿ ಪ್ರವೇಶಿಸಿದಾಗ ಆಕೆ ಅದೆಷ್ಟು ಕಾಳಜಿ, ಸಹನೆ, ಜಾಣ್ಮೆ, ಪ್ರೀತಿ, ವಿಶ್ವಾಸದಿಂದ ಇರಬೇಕು. ಅದು ಅವಳ ಜೀವನದಲ್ಲಿ ಬರುವ ಪರೀಕ್ಷೆ ಎಂದೇ ಹೇಳ್ಬಹುದು. ಆದ್ರೆ ಆ ಪರೀಕ್ಷೆಯಲ್ಲಿ ಆಕೆ ಎರಡೂ ಕುಟುಂಬಗಳ ಸಂಬಂಧಗಳ ನಡುವೆ ಹೊಸದಾದ ಬಂಧನವನ್ನೇ ಬೆಸೆಯಬೇಕಾಗುತ್ತದೆ. ಅದೆಷ್ಟೋ ಭಾವನೆಗಳನ್ನು ಆಕೆ ತನ್ನಲ್ಲೇ ಮರೆಮಾಚಬೇಕಾಗುತ್ತದೆ. ಗೊಂದಲಕ್ಕೆ ಒಳಗಾಗಬೇಕಾಗುತ್ತದೆ. ಆ ಎಲ್ಲಾ ಸನ್ನಿವೇಶಗಳು ಆ ಕ್ಷಣಕ್ಕೆ ಅವಳಿಗೆ ಅಸಮಧಾನವನ್ನುಂಟು ಮಾಡಿದರೂ, ತನ್ನ
ಭಾವನೆಗಳ ತ್ಯಾಗಕ್ಕೆ ಪ್ರತಿಯಾಗಿ ಪ್ರೀತಿಯ ವಾತಾವರಣ ಸಂಸಾರದಲ್ಲಿ ಸಿಗುತ್ತದೆ. ಅಂತೆಯೇ ಮನೆಗೆ ಬರುವ ಸೊಸೆಯು ಎಲ್ಲರೊಂದಿಗೂ ಹೊಂದಿಕೊಂಡು ಪ್ರೀತಿ ವಿಶ್ವಾಸದಿಂದಿರಬೇಕು. ಸಮಾಜದಲ್ಲಿ ಸುಂದರ ಸಂಸಾರವನ್ನು ನಿರ್ಮಿಸಬೇಕು ಎನ್ನುವುದು ಅತ್ತೆ ಮಾವನ ಆಸೆಯಾಗಿರುತ್ತದೆಯೇ ಹೊರತು ಬಂದ ಸೊಸೆ ಅವಳಿಗಿಷ್ಟವಾಗುವಂತೆ ವರ್ತಿಸಲಿ ಎಂದಲ್ಲ... ಆದರೆ ಇತ್ತೀಚಿನ ಹೆಣ್ಣು ಮಕ್ಕಳಲ್ಲಿ ಸಂಸಾರದ ಕಲ್ಪನೆಗಳು ಹಾಗೂ ವರ್ತನೆಗಳು ಬದಲಾಗುತ್ತಿದೆ. ಇದರ ಪರಿಣಾಮವನ್ನೂ ತಾವೇ ಅನುಭವಿಸುತ್ತಿರುವುದೂ ಸಹ ಅವರಿಗೆ ಅರಿವಾಗುತ್ತಿಲ್ಲ. ಇದಕ್ಕೆ ಸರಿಯಾಗಿ ಪುರುಷರ ವರ್ತನೆಗಳೂ ಅತಿಯಾಗುತ್ತಿರುವುದೂ ಸಹ ಹೆಣ್ಣಲ್ಲಿ ಗೊಂದಲ, ಆತಂಕದ ಭಾವನೆ ಅರಳುತ್ತಿದೆ. ‘‘ಇಂದಿನ ಅನೇಕ ಹೆಣ್ಣು ಹಾಗೂ ಗಂಡು ಮಕ್ಕಳು ಚಿಕ್ಕ ವಯಸ್ಸಿನಲ್ಲಿರುವಾಗಲೇ ಬಹಳ ಸ್ವತಂತ್ರವಾಗಿ
ಹಾಗೂ ಬಹಳ ಮುದ್ದಿನಿಂದ ಬೆಳೆಯುವುದರಿಂದ ಯಾವುದೇ ಜವಾಬ್ದಾರಿಗಳ ಬಗ್ಗೆ ಕಲ್ಪನೆಗಳಿರುವುದಿಲ್ಲ. ತಂದೆ ತಾಯಿಗಳೂ ಸಹ ಮಕ್ಕಳು ಯಾವುದೇ ಕಷ್ಟವಿಲ್ಲದೆ ಬೆಳೆಯಬೇಕೆಂದು, ಯಾವುದೇ ರೀತಿಯ ಕಷ್ಟಗಳಿಲ್ಲದೆ ಬೆಳೆಸುತ್ತಾರೆ. ಅವರು ಹೇಳಿದ್ದನ್ನು ಎಷ್ಟೇ ಕಷ್ಟವಾದರೂ ನೆರವೇರಿಸುತ್ತಾರೆ. ಅದರ ಪರಿಣಾಮವಾಗಿ ಮದುವೆಯಾದ ಮೇಲೆ ಪರಸ್ಪರ ಹೊಂದಾಣಿಕೆಯಾಗದೆ ಬೇರೆಯಾಗುತ್ತಾರೆ’’
ಎನ್ನುತ್ತಾರೆ ಮನಃಶಾಸ್ತ್ರಜ್ಞರು.
ಸಂಸಾರದ ಪ್ರೀತಿ: ಪ್ರೀತಿ ಎಂದರೆ ತ್ಯಾಗ. ನಾವು ಇಷ್ಟ ಪಡುವವರಿಗಾಗಿ ನಮ್ಮ ಇಷ್ಟವನ್ನು ತ್ಯಾಗ ಮಾಡುವುದು. ಪರಸ್ಪರ ಒಬ್ಬರಿಗೊಬ್ಬರು ಸಹಕಾರ ಮನೋಭಾವದಿಂದ ಕೆಲಸ ಕಾರ್ಯಗಳಲ್ಲಿ ನಮ್ಮನ್ನು ಭಾಗಿಯಾಗಿಸಿಕೊಳ್ಳುವುದರಿಂದ ಒಬ್ಬರಿಗೊಬ್ಬರು ಪ್ರೀತಿ ಪಾತ್ರರಾಗಲು ಸಾಧ್ಯ. ನಾನು ಎಂಬ ಭಾವನೆಯನ್ನು ಬಿಟ್ಟು ನಾವು ಎಂಬ ಭಾವನೆ ಇದ್ದರೆ ಮಾತ್ರ
ಸಂಸಾರದ ಪ್ರೀತಿ ಸಿಗಲು ಸಾಧ್ಯ. ಎಲ್ಲಕ್ಕೂ ಮಿಗಿಲಾಗಿ ಒಬ್ಬರ ಮೇಲೆ ಇನ್ನೊಬ್ಬರು
ನಂಬಿಕೆ ಇಟ್ಟರೆ ಪ್ರಾಣಸಖಿ/ಸಖನಾಗಲು ಸಾಧ್ಯ.

ಹೀಗೆ ಮಾಡದಿರಿ
1. ಪಕ್ಕದ ಮನೆಯಲ್ಲಿರುವ ದುಬಾರಿ ವಸ್ತುಗಳು ನಮ್ಮ ಮನೆಯಲ್ಲೂ ಇರಬೇಕೆಂದು ಬಯಸಬೇಡಿ.
2. ನೀವು ಮದುವೆ ಆಗುವ ಮೊದಲು ಬಳಸಿದ ಬ್ರ್ಯಾಂಡೆಡ್ ವಸ್ತುಗಳು ದುಬಾರಿಯಾದ್ದರೆ ಅದೇ ವಸ್ತು ಈಗಲೂಬೇಕೆಂದು ಹಠ ಮಾಡದಿರಿ.
3. ನಿಮ್ಮ ಗಂಡ ಮನೆಗೆ ಬರುತ್ತಿದ್ದಂತೆಯೇ ಅಳುಮುಖ, ಸಿಡುಕು ಭಾವನೆಯನ್ನು ಹೊತ್ತು ಕುಳಿತುಕೊಳ್ಳ ಬೇಡಿ.
4. ನಿಮ್ಮ ಐಶಾರಾಮಿ ನಿರೀಕ್ಷೆಯನ್ನು ಒಂದಾದ ಮೇಲೊಂದರಂತೆ ಪದೇಪದೇ ಗಂಡನ ಮೇಲೆ ಹೇರಬೇಡಿ.
5. ಗಂಡ ಬೇಸರದಲ್ಲಿರುವಾಗ ಯಾವುದೋ ಕಾಯಿಲೆ ಬಂದಾಗ ಅಥವಾ ಇನ್ಯಾವುದೋ ಸಮಸ್ಯೆ ಗುರಿಯಾದಾಗ ನಿಮಗೆ ಸಂಬಂಧ
ಇಲ್ಲದವರಂತೆ ವರ್ತಿಸಬೇಡಿ.
6. ನಿಮ್ಮ ನಡುವೆ ಜಗಳ ( ಭಿನ್ನಾಭಿಪ್ರಾಯ) ಉಂಟಾದಾಗ ಪತಿಯೇ ಕ್ಷಮೆ ಕೇಳಬೇಕೆಂದು ಬಯಸಬೇಡಿ.
7. ಮನೆಗೆ ಅತಿಥಿ, ಸ್ನೇಹಿತರು ಅಥವಾ ನೆರೆಹೊರೆಯವರು ಬಂದಾಗ ನಿಮ್ಮ ಪತಿಯ ಬಗ್ಗೆ ಚಾಡಿ ಹೇಳುವುದು ಹಾಗೂ ತುಚ್ಛವಾಗಿ ಮಾತನಾಡಬೇಡಿ.
8. ಪ್ರತಿಬಾರಿಯೂ ನಿಮ್ಮ ಇಷ್ಟ ದಂತೆಯೇ ನೆದುಕೊಳ್ಳಬೇಕೆಂದು ಬಯಸಬೇಡಿ.
ಅವರಿಗೂ ಭಾವನೆಳಿವೆ ಸ್ವಾತಂತ್ರ್ಯವಿದೆ ಎಂಬುದನ್ನುಮರೆಯದೆ ಅವರಿಷ್ಟದಂತೆ ಇರಲು ಬಿಡಿ.
9.ನಿಮಗೆ ಸಿಟ್ಟು ಬಂದಿದೆ ಎಂದು ತೋರಿಸಲು ಮನೆಯಲ್ಲಿರುವ ಪಾತ್ರೆಎಸೆಯುವುದು ಗಂಡನ ಶರ್ಟ ಹರಿಯುವುದು ಅಥವಾ
ಪಕ್ಕದಮನೆಯವರಿಗೆಲ್ಲಾ ಕೇಳುವಂತೆ ಕೂಗಬೇಡಿ.
10. ಗಂಡನ ತಂದೆ ತಾಯಿಗಳನ್ನು ಬಾಯಿಗೆ ಬಂದಂತೆ ಆಡಿಕೊಂಡು, ಅವರ
ಮನೆಯವರಿಂದ ಗಂಡನನ್ನು ದೂರ ಇರುವಂತೆ ಮಾಡಬೇಡಿ.

ಹೀಗೆ ಮಾಡಿ
1. ನೀವು ವಿವಾಹವಾಗಿ ಬಂದ ಮನೆಯವರ ಸಂಪ್ರದಾಯ,ಸಂಸ್ಕೃತಿಯನ್ನು ತಿಳಿಯಲು ಪ್ರಯತ್ನಿಸಿ.
2. ಅತ್ತೆ ಮಾವನನ್ನೂ ತಂದೆ ತಾಯಿಯಂತೆ ನೋಡಿಕೊಳ್ಳಿ. ಅವರೇನಾದರೂ ಹಾಗಲ್ಲಾ ಹೀಗೆ ಎಂದರೆ
ಸಿಟ್ಟಿನಿಂದ ಆಗದು ಎನ್ನುವ ಬದಲು ಹೇಗೆ ಮಾಡುವುದು ಎಂದು ಕೇಳಿ ತಿಳಿಯಿರಿ.
3. ಮನೆಯ ಆರ್ಥಿಕ ಸ್ಥಿತಿ ಹಾಗೂ ವ್ಯಕ್ತಿಯ ಆದಾಯವನ್ನು ನೋಡಿ ಮನೆಗೆ ಬೇಕಾದ
ವಸ್ತುಗಳನ್ನು ನಿಧಾನವಾಗಿ ಖರೀದಿಸಿ.
4. ಹಬ್ಬ ಬಂದಾಗ ಮನೆಯಲ್ಲಿ ಕಜ್ಜಾಯ, ದೇವರ ಪೂಜೆ ಆದ ಮೇಲೆ ಗಂಡ, ಅತ್ತೆ ಮಾವನಿಗೆ
ನಮಸ್ಕರಿಸಿ ಆಶೀರ್ವಾದ ಪಡೆಯಲು ಮರೆಯಬೇಡಿ.
5. ನಿಮ್ಮ ಪತಿ ಹೊರಗಡೆ ದುಡಿದು ಬಂದಮೇಲೆ ಬೇಡದಿರುವ ಚಿಕ್ಕ ಪುಟ್ಟ ಸಮಸ್ಯೆಗಳನ್ನೂ ದೊಡ್ಡದಾಗಿಸಿ ಅವರನ್ನು ಇನ್ನಷ್ಟು
ಗೊಂದಲಕ್ಕೀಡುಮಾಡುವ ಬದಲು ಅವರ ಮನಸ್ಸು ಪ್ರಶಾಂತವಾಗಿರಲು ಅವಕಾಶ ನೀಡಿ.
6. ನಿಮ್ಮ ಕೊಂಕು ಮಾತುಗಳಿಂದ ಗಂಡನಿಗೆ ಬುದ್ಧಿ ಬರುವ ಬದಲು ನಿಮ್ಮ ಮೇಲೆ ಇರುವ ಪ್ರೀತಿ ಕಡಿಮೆಯಾಗುತ್ತದೆ ಎಂಬುದನ್ನು ಮರೆಯಬೇಡಿ.
7. ಆದಷ್ಟು ನೀವು ಖುಷಿಯಾಗಿರಿ ನಿಮ್ಮ ಮನೆಯವರೂ ಖುಷಿಯಿಂದಿರಲು ಬಿಡಿ.
8. ಸಂಸಾರದಲ್ಲಿ ಬಂದ ಸಮಸ್ಯೆಗಳ ನಿವಾರಣೆಗೆ ನೀವೂ ಭಾಗಿಯಾಗಿ. ಅದೆಲ್ಲಾ ದೊಡ್ಡ ಸಮಸ್ಯೆಯಲ್ಲ ಎಂಬ ಸಾಂತ್ವಾನ ನೀಡಿ.
9. ತನ್ನ ಸಂಸಾರದಲ್ಲಷ್ಟೇ ಅಲ್ಲಾ ಪ್ರತಿಯೊಂದು ಸಂಸಾರದಲ್ಲೂ ಅವರದೇ ಆದ ಸಮಸ್ಯೆಗಳು ಇದ್ದೇ ಇರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
10. ನಿಮ್ಮ ಪ್ರೀತಿ ಹಾಗೂ ಪ್ರೀತಿಯ ವರ್ಣನೆಯನ್ನು ಮಾತಲ್ಲಿ ಹೇಳುವ ಬದಲು ಒಂದು ಹಾಳೆಯಲ್ಲಿ ಬರೆದು ಪತಿಗೆ ನೀಡಿ. ಅದು ನಿಮ್ಮ ಪ್ರೀತಿಯನ್ನು ಹೆಚ್ಚಿಸುತ್ತದೆ.
11. ವಿಶೇಷ ಸಂದರ್ಭದಲ್ಲಿ ನೀವು ಜೀರಿಗೆ ಡಬ್ಬದಲ್ಲೋ ಚಹ ಪುಡಿ ಡಬ್ಬದಲ್ಲೋ ಸಂಗ್ರಹಿಸಿಟ್ಟುಕೊಂಡ ಹಣದಿಂದ ಏನಾದರೊಂದು ಚಿಕ್ಕ ಉಡುಗೊರೆಯನ್ನು ಪತಿಗೆ ನೀಡಿ.
12. ಮನೆಯನ್ನು ಆದಷ್ಟು ಸ್ವಚ್ಛ ಹಾಗೂ ಖುಷಿಯ ವಾತಾವರಣ ಇರುವಂತೆ ನೋಡಿಕೊಳ್ಳಿ.

ಮುನಿಸು ಬರದು ನನಗೆ...




ಅಂದು ಯುಗಾದಿಯ ಸಂಭ್ರಮ. ಮನೆಯಲ್ಲಿ ಎಲ್ಲರಿಗೂ ಹೊಸವರ್ಷದ ಸಂತಸ. ಅಮ್ಮನಿಗಂತೂ ಮನೆಯವರಿಗೆ ಹೊಸ ಕಜ್ಜಾಯವನ್ನು ತಿನಿಸುವ ಹುರುಪು. ಅಕ್ಕಂದಿರಿಗೆಲ್ಲಾ ಹೊಸಬಟ್ಟೆ ತೊಟ್ಟು ಅಪ್ಪನೊಂದಿಗೆ ತೋರಣ ಕಟ್ಟುವುದರಲ್ಲೇ ಮುಳುಗಿದ್ದರು. ಏನೂ ಬೇಡನನಗೆ, ನೀನು ಕೊಡಿಸುತ್ತೇನೆ ಎಂದ ಸೈಕಲ್‌ ಎಲ್ಲಿ? ನೀನು ಸೈಕಲ್‌ ಕೊಡಿಸದಿದ್ದರೆ ನಾನು ನಿನ್ನ ಬಳಿ ಮಾತಾಡುವುದಿಲ್ಲ ಎಂದು ಅಜ್ಜನೊಂದಿಗೆ ಮುನಿಸಿಕೊಂಡಿದ್ದವಳು ನಾನು. ಆಗ ನನಗೇನು ಸೊಕ್ಕು ಕಡಿಮೆ ಇರಲಿಲ್ಲ. ಅಜ್ಜ ಗೊಂಬೆ, ಹೊಸಬಟ್ಟೆ ಕೊಟ್ಟು ಸಮಾಧಾನ ಮಾಡಿದರೂ ಅಜ್ಜನಮೇಲಿನ ಸಿಟ್ಟು ಇಳಿದಿರಲಿಲ್ಲ. ಅಜ್ಜ ತನ್ನ ತೊಡೆಯಮೇಲೆ ನನ್ನನ್ನು ಮಲಗಿಸಿಕೊಂಡು ತಲೆ ಸವರುತ್ತಾ ಹೇಳುವ ಕತೆಯೂ ಬೇಕಿರಲಿಲ್ಲ. ಮೂಗಿನಮೇಲಿನ ಸಿಟ್ಟು ಹಬ್ಬ ಮುಗಿದು ಒಂದುವಾರವಾದರೂ ಗುರ್...
ಅಂತಲೇ ಇತ್ತು. ಅಲ್ಲಿಯವರೆಗೂ ಅಜ್ಜನೊಂದಿಗೆ ಮಾತನಾಡುತ್ತಿರಲಿಲ್ಲ. ಎಂಟನೇದಿನ ಶಾಲೆಯಿಂದ ಮನೆಗೆ ಬರುವಷ್ಟರಲ್ಲಿ ಗುಲಾಬಿ ಬಣ್ಣದ ಸೈಕಲ್‌ ನಿಂತಿತ್ತು. ಅದನ್ನು ಕಂಡ ಕ್ಷಣವೇ ಬಗಲಿಗಿದ್ದ ಪಾಟೀಚೀಲವನ್ನು ಬಿಸಾಡಿ ಸೈಕಲ್‌ ಹಿಡಿದು ಆಡಲು ಹೊರಟೆ. ಇನ್ನೇನು ಸೈಕಲ್‌ ಹತ್ತಬೇಕು ಎನ್ನುವಷ್ಟರಲ್ಲೇ ಸೈಕಲ್‌ ನನ್ನ ಮೇಲೆ ಬಿದ್ದಿತ್ತು. ಆಗ ಸೈಕಲ್‌ ಮೇಲೆ ಸಿಟ್ಟು ಬಂದು ಅಜ್ಜಾ.., ಗಾಯಕ್ಕೆ ಎಣ್ಣೆ ಹಚ್ಚಿಕೊಡು ಎಂದೆ. ಆಗ ಆಯಿ ಅಜ್ಜ ಇಲ್ಲಾ, ಯಾರನ್ನೋ ನೋಡಲು ಹೋಗಿದ್ದಾರೆ ಎಂದಿದ್ದೇ ತಡ ಅಜ್ಜನೊಂದಿಗೆ ಮಾತನಾಡಬೇಕೆಂದು ಗೇಟಲ್ಲೇ ಕುಳಿತು ಅಜ್ಜನಿಗಾಗಿ ಸಕಾಯುತ್ತಿದ್ದೆ. ಅಜ್ಜನೊಂದಿಗೆ ಕ್ಷಮೆ ಕೇಳಬೇಕು, ಅಜ್ಜನೊಂದಿಗೆ ಮಾತಾಡಬೇಕು ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದೆ. ಅಷ್ಟರಲ್ಲೇ ಒಬ್ಬಾತ ಓಡೋಡಿ ಬಂದು ಗೇಟು ತೆಗಿ ತಂಗಿ ಎಂದು ಹೇಳಿದ. ಇವನ್ಯಾರು ಎನ್ನುವ ಪ್ರಶ್ನೆ ಮನದಲ್ಲಿ ಮೂಡುತ್ತಿದ್ದಂತೆಯೇ ಒಂದು ದೊಡ್ಡವಸ್ತುವಿಗೆ ಬಿಳಿಬಟ್ಟೆ ಸುತ್ತಿ ನಾಲ್ಕೈದು ಜನ ಹೊತ್ತು ತರುತ್ತಿದ್ದರು. ಅರೇ, ಅಜ್ಜಾ ನನಗೆ ಸೈಕಲ್‌ ಮತ್ತೆ ಮನೆಗೇನೋ ಇನ್ನೊಂದು ಹೊಸವಸ್ತು ಕಳಿಸಿದ್ದಾನೆ ಎಂದು ಆಶ್ಚರ್ಯ ಪಟ್ಟು ನಿಂತಿದ್ದೆ. ಎಲ್ಲರೂ ಮನೆಗೆ ಹೋಗಿದ್ದೇ ಆ ವಸ್ತುವನ್ನು ಕೆಳಗಿಳಿಸಿ ಬಿಚ್ಚುತ್ತಿದ್ದಾಗ ಕಂಡಿದ್ದು ರಕ್ತದಿಂದ ತುಂಬಿದ್ದ ಅಜ್ಜನ ನಿರ್ಜೀವ ಮುಖ. ಒಂದು ನಿರ್ಜೀವ ವಸ್ತುವನ್ನು ಪಡೆಯುವ ಆಸೆಯಿಂದ ಜೀವಂತವಾದ ಆಸ್ತಿಯಾಗಿದ್ದ ಅಜ್ಜನ ಪ್ರೀತಿಯನ್ನೇ ಕಳೆದುಕೊಂಡಿದ್ದೆ. ಅಜ್ಜನ ಹನ್ನೆರಡನೆಯ ದಿನದಂದು ಬಂದ ಭಾಗವತರು ಅಪ್ಪನ ಬಳಿ ‘ಇವರು ಸೈಕಲ್‌ ಖರೀದಿಸಲು ಸಾಲಪಡೆದಿದ್ದರು. ಆದರೆ ಆ ಹಣ ಈಗಲೇ ಕೊಡಬೇಕೆಂದಿಲ್ಲ. ನಿಮ್ಮ ಕಷ್ಟಗಳೆಲ್ಲ ಕಳೆಯಲಿ, ನಿಧಾನವಾಗಿ ಕೊಡಿ. ಪಾಪ ಇಂಥ ವ್ಯಕ್ತಿ ಈರೀತಿ ಅಪಘಾತದಲ್ಲಿ ಸಾವನ್ನಪ್ಪಬಾರದಿತ್ತು’ ಎಂದರು.
ಆ ಕ್ಷಣದಿಂದಲೇ ಜೀನದಲ್ಲಿ ಯಾರೊಂದಿಗೂ ಮುನಿಸಿಕೊಂಡು ಮಾತು ಬಿಡಬಾರದು ಎಂಬುದನ್ನು ಅರಿತೆ. ನನಗೆ ಬುದ್ಧಿ ಬರಲು ಪ್ರೀತಿಯ ಅಜ್ಜನ ಸಾವೇ ಆಗಬೆಕಿತ್ತಾ..? ಒಂದಂತೂ ನಿಜ, ಪ್ರೀತಿಯ ಜೀವವಾಗಿದ್ದ ಅಜ್ಜ ನನ್ನ ಬಳಿ ಇದ್ದಷ್ಟು ಹೊತ್ತೂ ಮುನಿಸಿನಿಂದ ಮಾತನಾಡಲಿಲ್ಲ. ಆದ್ರೆ ಈಗ ಅಜ್ಜ ನೀನು ಬೇಕು. ನಿನ್ನೊಂದಿಗೆ ಮಾತನಾಡಬೇಕು. ನಿನ್ನ ತೊಡೆಯ ಮೇಲೆ ಮಲಗಿ ನೀ ಹೇಳುವ ಕಥೆ ಕೇಳಬೇಕು ಎಂದು ಗೋಗರೆದರೂ ಅಜ್ಜ ಬರಲಾರ... ಇನ್ನೇನಿದ್ದರೂ ಅವನ ಪ್ರೀತಿಯ ನೆನಪುಗಳಷ್ಟೇ..!